ಸಾಹಿತ್ಯವೇ ಜೀವನ ಎಂಬಂತೆ ಬದುಕಿದ, ಸಾಹಿತ್ಯಕ್ಕಾಗಿ ಈ ಶರೀರ ಎಂಬಂತೆ ಬಾಳಿದ, ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಪ್ರಾಚೀನತೆ-ಆಧುನಿಕತೆಗಳ ಸೇತುವೆಯೆಂದೂ, ಹೊಸಗನ್ನಡದ ಬೆಳ್ಳಿಚುಕ್ಕಿ, ನವೋದಯದ ಮುಂಗೋಳಿ, ಹೊಸಗನ್ನಡದ ಕಾವ್ಯೋದ್ಯಾನದಲ್ಲಿ ಮೊದಲು ಕೂಗಿದ ಕೋಗಿಲೆಯೆಂದು ಕೊಂಡಾಡಲ್ಪಟ್ಟ ಕನ್ನಡಿಗರ ಹೆಮ್ಮೆಯ ಕವಿ "ಮುದ್ದಣ" ಎಂಬ ಮುದ್ದಾದ ಕಾವ್ಯನಾಮದಿಂದಲೇ ಪರಿಚಿತನಾದ ನಂದಳಿಕೆ ಲಕ್ಷ್ಮೀ ನಾರಾಯಣನ ಬಗ್ಗೆ ಬರೆಯಲು ಅತೀವವಾದ ಹೆಮ್ಮೆ ಎನಿಸುತ್ತದೆ.
24ನೇ ಜನೇವರಿ 1870 ರಂದು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಂದಳಿಕೆಯಲ್ಲಿ ಮುದ್ದಣ ಜನಿಸಿದ. ತಂದೆ ತಮ್ಮಯ್ಯ, ತಾಯಿ ಮಹಾಲಕ್ಷ್ಮೀ, ತುಂಬ ಬಡಕುಟುಂಬ. ಮುದ್ದಣನ ನಿಜನಾಮ ಲಕ್ಷ್ಮೀನಾರಾಯಣ , ಬಾಲ್ಯದಲ್ಲಿ ಮುದ್ದಿನಿಂದ ಮುದ್ದಣ ಎಂದೇ ಕರೆಯುತ್ತಿದ್ದರು. ಬಾಲ್ಯದಲ್ಲಿ ಆತನಿಗೆ ಯಕ್ಷಗಾನ, ಹರಿಕಥೆ, ಸಂಗೀತಗಳಲ್ಲಿ ಅತೀಯಾದ ಪ್ರೀತಿ. ಇವೆಲ್ಲ ಅತೀರೇಖಗಳಿಂದ ತಂದೆಯಿಂದ ಏಟುಗಳನ್ನೂ ತಿನ್ನುತ್ತಿದ್ದ.
ಇವೆಲ್ಲ ಆಸಕ್ತಿಗಳೊಂದಿಗೆ ಓದಿನಲ್ಲೂ ಮುಂದಿದ್ದ. ಕಿತ್ತು ತಿನ್ನುವ ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ಬಿಟ್ಟ. ಅಂದು ಮುಂದಿನ ವಿದ್ಯಾಭ್ಯಾಸಕ್ಕೆ ಉಡುಪಿಗೆ ಹೋಗಬೇಕಿತ್ತು, ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಕುಟುಂಬಕ್ಕೆ ಆಸಕ್ತಿಯಾಗಲಿ ಆ ಶಕ್ತಿಯಾಗಲಿ ಇರಲಿಲ್ಲ. ಕೆಲ ದಿನ ಕೂಲಿ ಕೆಲಸ ಮಾಡಿದ ಆತನಲ್ಲಿ ಮತ್ತೇ ಕಲಿಯಬೇಕೆಂಬ ಆಸೆ ಚಿಗುರಿದಾಗ ಶಿಕ್ಷಕ ತರಬೇತಿ ಪಡೆಯಲು ಕನ್ನಡ ಟ್ರೈನಿಂಗ ಶಾಲೆಗೆ ಸೇರಿದ. ಎರಡು ವರ್ಷಗಳ ಈ ತರಬೇತಿಯಲ್ಲಿ ಶಿಷ್ಯವೇತನ ನೀಡಲಾಗುತ್ತಿತ್ತು. ತರಬೇತಿಯ ನಂತರ ಶಿಕ್ಷಕ ಉದ್ಯೋಗ ದೊರೆಯದ ಕಾರಣ ಮದ್ರಾಸ್ನಲ್ಲಿ ದೈಹಿಕ ಶಿಕ್ಷಕ ಶಿಕ್ಷಣ ತರಬೇತಿ ಪಡೆದ. ಇದರ ಆಧಾರದ ಮೇಲೆಯೇ ಉಡುಪಿಯ ಬೋರ್ಡ ಮಿಡ್ಲ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕನಾಗಿ ಕೆಲಸ ಗಿಟ್ಟಿಸಿಕೊಂಡ. ಇದು ಆತನ ಜೀವನಕ್ಕೆ ಸಿಕ್ಕ ಮಹತ್ವದ ತಿರುವು.
ವಿರಾಮದ ಅವಧಿಯಲ್ಲಿ ಮುದ್ದಣ ಶಾಲೆಯ ಲೈಬ್ರರಿಯಲ್ಲಿ ಬಹಳ ಓದುತ್ತಿದ್ದ. ದಿನವೊಂದಕ್ಕೆ ನಾಲಕೈದು ಕಾದಂಬರಿಗಳನ್ನು ಮುಗಿಸುತ್ತಿದ್ದ. ಆ ಒಂದೊಂದು ಕಾದಂಬರಿಗಳನ್ನು ಓದಿದಾಗೊಮ್ಮೆ ತಾನೂ ಅಂತಹ ಕಾದಂಬರಿಗಳನ್ನು ಬರೆಯಬೇಕೆಂಬ ಆಸೆ ಹೆಮ್ಮರವಾಗುತ್ತಿತ್ತು.
ಅಪಾರ ಅದ್ಯಯನದ ಪರಿಣಾಮವಾಗಿ 1891ರಲ್ಲಿ 'ರತ್ನಾವತಿ ಕಲ್ಯಾಣ' ಮತ್ತು 'ಕುಮಾರ ವಿಜಯ' ಎಂಬೆರಡು ಹೊಸತನವುಳ್ಳ ಯಕ್ಷಗಾನ ಪ್ರಸಂಗಗಳನ್ನು ರಚಿಸಿದನು. ಅಂದು ಅದರಿಂದಾದ ಆರ್ಥಿಕ ಲಾಭ ಹೇಳಿಕೊಳ್ಳುವಂತದ್ದೇನು ಇಲ್ಲವಾದರೂ ಉತ್ತಮವಾದ ಪ್ರತಿಕ್ರಿಯೆಯಂತೂ ಬಂದಿತ್ತು. 1893ರಲ್ಲಿ ಮುದ್ದಣ ಕಮಲಾಬಾಯಿಯನ್ನು ಮದುವೆಯಾದ. ಆಕೆಯೇ ಆತನ ಪಾಲಿನ ಮನೋರಮೆ! 1894ರಲ್ಲಿ ಕಾವ್ಯಮಂಜರಿ ಎಂಬ ಮಾಸ ಪತ್ರಿಕೆಯಲ್ಲಿ ಆತನ ಹಳೆಗನ್ನಡದ 'ಅದ್ಬುತ ರಾಮಾಯಣ' ಪ್ರಕಟವಾಗತೊಡಗಿತು. ಆದರೆ ಮುದ್ದಣ ತನ್ನ ನಿಜನಾಮವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದ. 1995ರಲ್ಲಿ ವಾರ್ಧಕ ಷಟ್ಪದಿಯಲ್ಲಿ 'ಶ್ರೀರಾಮ ಪಟ್ಟಾಭೀಷೇಕ'ಎಂಬ ಗ್ರಂಥವನ್ನೂ ಬರೆದ,ಇದೂ ಕೂಡ ಕಾವ್ಯಮಂಜರಿಯಲ್ಲಿ ಪ್ರಕಟವಾಗತೊಡಗಿತು. ಇದರಲ್ಲಿಯೂ ಆತನ ನಿಜನಾಮ ಮರೆ ಮಾಚಲ್ಪಟ್ಟಿತ್ತು. ಇವೆರಡೂ ಕೃತಿಗಳಿಗೆ ಆತ ಬಳಸಿದ್ದ ಕಾವ್ಯ ನಾಮ "ಮುದ್ದಣ". ಯಾಕೆ ಹೀಗೆ ಮಾಡಿದ್ದ ಎಂದು ತಾವು ಕೇಳಬಹುದು... ಯಾಕೆಂದರೆ ಒಬ್ಬ ವ್ಯಾಯಾಮ ಮಾಸ್ತರ, ಹೆಚ್ಚು ಶಿಕ್ಷಣ ಇಲ್ಲದವನು ಇಂತಹ ಕಾವ್ಯಗಳನ್ನು ಬರೆದನೆಂದರೆ ನಂಬುವುದಿಲ್ಲ ಎಂಬ ಸಂಶಯ ಆತನಲ್ಲಿದ್ದುದೇ ಕಾರಣ. ಆದರೆ ಇವೆರಡೂ ಗ್ರಂಥಗಳು ಅಂದು ಮದರಾಸು ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಾದವು!!
ಮುದ್ದಣ ವ್ಯಾಯಾಮ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಸರಕಾರಿ ಕಾಲೇಜಿನಲ್ಲಿ ಕನ್ನಡ ಅದ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿದ. ಸಂದರ್ಶನಕ್ಕೆ ಸಮಕಾಲೀನರಾದ ಪಂಜೆ ಮಂಗೇಶರಾಯರೂ ಬಂದಿದ್ದರು. ಅವರಿಬ್ಬರಲ್ಲಿ ಸ್ನೇಹವು ಬೆಳೆಯಿತು. ದುರಾದೃಷ್ಟವಶಾತ್ ಮುದ್ದಣ ಆಯ್ಕೆಯಾಗದೇ ಪಂಜೆಯವರಾದರು. ಆಗ ಪಂಜೆಯವರು ಮುದ್ದಣನಿಗೆ ಪತ್ರ ಬರೆಯತ್ತ "ಭತ್ತವನ್ನು ಕುಟ್ಟುವ ಒನಕೆಯನ್ನು ಕನ್ನಡ ಕಲಿಸಲು ತಂದರು, ಚಿತ್ರವನ್ನು ಬಿಡಿಸುವ ಕುಂಚವನ್ನು ಕಿವಿ ಕೊಳೆ ತೆಗೆಯುವ ಕುಗ್ಗೆ ಕಡ್ಡಿಯನ್ನಾಗಿಸಿದರು" ಎಂದು ಮಾರ್ಮಿಕವಾಗಿ ತಿಳಿಸಿದರು.
ತದನಂತರ ಮುದ್ದಣ ಸಿಹಿ ದಾಂಪತ್ಯದ ಸಂವಾದದನ್ವಯ 'ರಾಮಾಶ್ವಮೇಧ'ವನ್ನು ಬರೆದನು. ಈ ಕೃತಿಯಲ್ಲಿ ಮುದ್ದಣ-ಮನೋರಮೆಯರ ಸಂವಾದ. ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ. ಇದು 'ಕರ್ನಾಟಕ ಕಾವ್ಯ ಕಲಾನಿಧಿ' ಯಲ್ಲಿ ಮುದ್ದಣನ ಹೆಸರಿನಲ್ಲಿ ಪ್ರಕಟವಾಯಿತು.
ಪೌರಾಣಿಕ ಹಿನ್ನೆಲೆಯ ಕೃತಿಗಳನ್ನು ಬರೆಯುವುದನ್ನು ಬಿಟ್ಟು 'ಗೋದಾವರಿ' ಎಂಬ ಸಾಮಾಜಿಕ ಕಾದಂಬರಿ ಬರೆಯಲು ಆರಂಭಿಸಿದಾಗ ಆತನಿಗೆ ಅಂದಿಗೆ ಭಯಂಕರವಾದ ಕ್ಷಯರೋಗ ಬಂದಿತು. ಈ ರೋಗ ತನ್ನ ಹೆಂಡತಿ ಮಕ್ಕಳಿಗೆ ಬರದಿರಲೆಂದು ಉದ್ದೇಶಪೂರ್ವಕವಾಗಿ ತವರು ಮನೆಗೆ ಕಳಿಸಿದ. ಗೋದಾವರಿ ಪೂರ್ಣವಾಗಲಿಲ್ಲ.
ಭಗವದ್ಗೀತೆಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಬೇಕೆಂದಿದ್ದ.ಕನ್ನಡಕ್ಕೆ ಅಗತ್ಯವಾದ ವ್ಯಾಕರಣ ಗ್ರಂಥವೊಂದನ್ನು ರಚಿಸಬೇಕೆಂದಿದ್ದ. ಇವೆಲ್ಲ ಕೈಗೂಡದೇ ರೋಗ ತೀವ್ರವಾಗಿ 1901ರಲ್ಲಿ ಅಕಾಲ ಮೃತ್ಯುವಿಗೆ ಈಡಾದ. ಕನ್ನಡ ಸಾಹಿತ್ಯ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಮೂಲ್ಯ ಕೊಡುಗೆ ಅಂತ ಜನ ಮಾತಾಡಿಕೊಳ್ಳುತ್ತಿದ್ದ ಚೇತನವೊಂದು ಸಣ್ಣ ಮನೆಯಲ್ಲಿ ಒದ್ದಾಡಿ ಜಾಗ ಖಾಲಿ ಮಾಡಿತು.
ಬರೆಯುವುದರಲ್ಲಿ ಹೆಚ್ಚು ಉತ್ಸಾಹ ತೋರಿ, ಪಾಂಡಿತ್ಯವಿದ್ದರೂ ಎಲೆ ಮರೆಯ ಕಾಯಿಯ ಹಾಗಿದ್ದ ಜೀವ.... ಇನ್ನೂ ಹೆಚ್ಚು ಬರೆಯಬೇಕೆಂಬ ಆಸೆಯನ್ನಿಟ್ಟು ಕೊಂಡಿದ್ದ ಜೀವ.... ನಂದಳಿಕೆಯ ನಂದಾದೀಪ.... ಎಲ್ಲರ ಮುದ್ದಿನ ಮುದ್ದಣ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಹಲೋಕದ ಯಾತ್ರೆ ಮುಗಿಸಿದ. ಆದರೆ ಆತನಿಗೆ ಏನೋ ಸಾಧಿಸಿದ ತೃಪ್ತಿ... ಇನ್ನೂ ಸಾಧಿಸಬೇಕಾಗಿತ್ತು ಎಂಬ ಅತೃಪ್ತಿ ಎರಡೂ ಇದ್ದವು.
ತೃಪ್ತಿ ಮತ್ತು ಅತೃಪ್ತಿಯ ನಡುವಿನ ತೊಳಲಾಟವೇ ಜೀವನವಲ್ಲವೇ? ಎಷ್ಟೇ ವರ್ಷ ಬದುಕಿರಲಿ, ಎಂತಹ ಪರಿಸ್ಥಿತಿಯಲ್ಲಿಯಾದರೂ ಬದುಕಿರಲಿ ... ಛಲವೊಂದಿದ್ದರೆ ಏನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಮುದ್ದಣನೇ ಮಾದರಿ.ಮುದ್ದಣ ಬದುಕಿದ್ದು ಕೇವಲ 31 ವರ್ಷವಾದರೂ ಆತ ಸಾಧಿಸಿದ್ದು ಅನನ್ಯ... ಆತನ ಸಾಧನೆಗೆ ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಬಿಟ್ಟು ಹೋಗಿರುವ ಆತನ ಕೆಲವೇ ಕೆಲವು ಕನ್ನಡ ಕಸ್ತೂರಿ ಕೃತಿಗಳೇ ಸಾಕ್ಷಿ!!!
#ಮುದ್ದಣ
#ಕನ್ನಡಂ_ಕತ್ತೂರಿಯಲ್ತೇ!
#ಪದ್ಯಂ_ವದ್ಯಂ,_ಗದ್ಯಂ_ಹೃದ್ಯಂ!
Comments
Post a Comment